ಕವಿಮನದಾಳದಿಂದ
ಗುರುವಾರ, ಫೆಬ್ರವರಿ 9, 2017
ಮೂಢ ಉವಾಚ - 221
ಶ್ರವಣಕೆ ಶತಪಾಲು ಮಿಗಿಲು ಮನನ
ಮನನಕೆ ಶತಪಾಲು ಮಿಗಿಲನುಸರಣ |
ಅನುಸರಣಕಿಂ ಮಿಗಿಲಲ್ತೆ ನಿರ್ವಿಕಲ್ಪ
ನಿರ್ವಿಕಲ್ಪತೆಯಿಂ ಅರಿವು ಮೂಢ ||
ಮೂಢ ಉವಾಚ - 220
ವಿಷವಿರುವವರೆಗೆ ಆರೋಗ್ಯವೆಲ್ಲಿ
ವಿಷಯ ತುಂಬಿರುವಲ್ಲಿ ಮುಕ್ತಿಯೆಲ್ಲಿ |
ಅರಿವು ಬಹುದೆಲ್ಲಿ ಅಹಮಿಕೆಯಿರುವಲ್ಲಿ
ಸಿದ್ಧಿಯದೆಲ್ಲಿ ಅರಿವು ಇರದಲ್ಲಿ ಮೂಢ ||
ಶನಿವಾರ, ಫೆಬ್ರವರಿ 4, 2017
ಮೂಢ ಉವಾಚ - 219
ಶ್ರದ್ಧೆಯಿರಬೇಕು ಮಾಡುವ ಕಾರ್ಯದಲಿ
ಮೊದಲು ಕಾಯಕದ ಇರಬೇಕು ಅರಿವು |
ಬಿಡದಿರಬೇಕು ಗುರಿಯ ಸಾಧಿಪ ಛಲವ
ಯೋಗ ಭೋಗಸಿದ್ಧಿಗಿದುವೆ ದಾರಿ ಮೂಢ ||
ಶುಕ್ರವಾರ, ಫೆಬ್ರವರಿ 3, 2017
ಮೂಢ ಉವಾಚ - 218
ಸಾತ್ವಿಕತೆಯಿಂದ ಜ್ಞಾನ ಶಾಂತಿ ಆನಂದ
ರಾಜಸಿಕ ಪಡೆಯುವನು ಆಯಾಸ ನೋವ |
ಪರರ ನೋಯಿಪ ತಾಮಸವೆ ಅಜ್ಞಾನ
ಹಿತವದಾವುದೀ ಮೂರರಲಿ ಮೂಢ ||
ಶುಕ್ರವಾರ, ನವೆಂಬರ್ 11, 2016
ಮೂಢ ಉವಾಚ - 217
ಸತ್ವಗುಣ ಸಂಪನ್ನ ಸ್ವರ್ಗವನೆ ಸೇರುವನು
ಇದ್ದಲ್ಲೆ ಇರುವನು ರಾಜಸಿಕ ಗುಣದವನು |
ಪಶು ಪ್ರಾಣಿ ಕೀಟವಾಗುವನು ತಾಮಸಿಕ
ಅಟ್ಟಡುಗೆಯುಣಬೇಕು ಇದು ಸತ್ಯ ಮೂಢ ||
ಬುಧವಾರ, ಅಕ್ಟೋಬರ್ 12, 2016
ಮೂಢ ಉವಾಚ - 216
ರಾಗರಹಿತ ಮನ ದೀಪದ ಕಂಬವಾಗಿ
ಸಂಸ್ಕಾರ ಬತ್ತಿಯನು ಭಕ್ತಿತೈಲದಿ ನೆನೆಸಿ |
ದೇವನ ನೆನೆವ ಮನ ಬತ್ತಿಯನು ಹಚ್ಚಲು
ಜ್ಞಾನಜ್ಯೋತಿ ಬೆಳಗದಿಹುದೆ ಮೂಢ ||
ಭಾನುವಾರ, ಅಕ್ಟೋಬರ್ 2, 2016
ಮೂಢ ಉವಾಚ - 215
ಸಂಕಟವ ಪರಿಹರಿಸೆ ವೆಂಕಟನ ಬೇಡುವರು
ಧನಕನಕ ಆಯಸ್ಸು ಸಂಪತ್ತು ಕೋರುವರು |
ಜ್ಞಾನಿಗಳರಿತಾರಾಧಿಪರು ನಿರ್ಮೋಹದಲಿ
ಅರಿವಿನ ದಾರಿಯರಸುವರು ಮೂಢ ||
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)