ಬುಧವಾರ, ಆಗಸ್ಟ್ 22, 2018

ಸತ್ಯಪ್ಪನ ಸತ್ಯ !


ಸತ್ಯಪ್ಪನೆಂಬೋನು ಎಲ್ಲದಾನೋ ಯಪಾ
ನಡುರಾತ್ರ್ಯಾಗ ಬಿಡದೆ ಹೊತ್ತೊಯ್ದರೋ |
ನನ್ನ ದಿಕ್ಕವನು ನನ್ನ ಉಸಿರವನು ಬಿಟ್ಟು ಬಿಡಿರೋ ಯಪಾ
ಸೆರಗೊಡ್ಡಿ ಬೇಡುವೆನು ಪುಣ್ಣೇವ ಕಟ್ಕೋರೀ ಯಪಾ ||

ನಮ್ಹಂತ್ಯಾಕ ಸತ್ಯಪ್ಪ ಇಲ್ಲಾ ಕಣಬೇ
ದೊರೆಯ ಕಾರ‍್ನಾಗವನ ಒಯ್ದಾರಬೇ |
ದೊರೆಯ ಕಣ್ಣೀಗಿ ಅವ ಕಿಸುರು ಕಣಬೇ
ದೊರೆಯ ಹಾದ್ಯಾಗವನು ಮುಳ್ಳಂತ್ಯಬೇ ||

ಅಂಗನಬೇಡ ನನರಾಜ ಕಾಪಾಡೋ ಯಪಾ
ನೀನೆ ನನ ದ್ಯಾವ್ರಂತ ದೀಪ ಹಚ್ತೀನಪಾ |
ಊರ ಬಿಟ್ಟೇವಂತೆ ತಿರುಪೆ ಬೇಡೇವಂತೆ
ಜೀವವೊಂದನಕುಳಿಸಿ ಬಿಟ್ಟು ಬಿಡಿರೋ ಯಪಾ ||

ಚಿಂತೆ ಬಿಡು ಮುದುಕಿ ಸತ್ಯಪ್ಪ ಬರ್ತಾನಬೇ
ಉಪ್ಪೆಸರು ಮಾಡಿಟ್ಟು ದಾರಿ ಕಾಯ್ವೋಗಬೇ |
ಆಳು ಮಕ್ಕಳು ನಾವು ನಮ್ಕೈಲಿ ಏನೈತಬೇ
ಕನಿಕರವ ದಣಿಗೆ ಅಡ ಇಟ್ಟೀವಬೇ ||

ಸತ್ಯಪ್ಪ ಬರದೆ ಓಗಾಣಿಲ್ಲ ನಾ ಓಗಾಣಿಲ್ಲಾ 
ಎಂಗಾರ ಮಾಡ್ಯವನ ಉಳಿಸೋ ಯಪಾ |
ಎಲ್ಲವನೊ ನನ ಕಂದ ಎಂಗವನೋ ನನ ಚಂದ
ನನ್ನೊಪ್ಪ ಮಾಡುದಕೆ ಅವನು ಬೇಕ್ರೋ ಯಪಾ ||

ಅಷ್ಟರಲ್ಲಿ . .
ಭರ್ರೆಂದು ಕಾರೊಂದು ಮೂಟೆಯೊಂದನು ಇಳಿಸಿ 
ಸರ್ರೆಂದು ತಿರುಗಿ ಒಂಟೋಯ್ತಲಾ |
ಚೀರುತ್ತ ಭೋರ‍್ಯಾಡಿ ಮುದುಕಿ ಅಳ್ತೈತಲ್ಲಾ
ಬಿಟ್ಟ ಕಣ್ ಬಿಟ್ಟಂತೆ ನೆಟ್ಟ ಕಣ್ ನೆಟ್ಟಂತೆ ಸತ್ಯಪ್ಪ ಕುಂತವ್ನಲ್ಲ ||

ಸತ್ಯಪ್ಪ ಸತ್ತಿಲ್ಲ ಸತ್ಯ ಮಾತ್ರ ಪೂರ್ತಿ ಸತ್ತೋಯ್ತಲಾ
ಉಳ ಬಿದ್ದು ಸಾಯಿರೋ ಅದ್ದು ತಿಂದೋಗಲೋ |
ಮಣ್ಣು ತೂರಿದ ಮುದುಕಿ ಶಾಪ ಹಾಕಿತಲ್ಲಾ
ಕರಿ ಮೋಡ ಮುಸುಕಿ ಬಾನೆಲ್ಲ ಕಪ್ಪಾಯ್ತಲಾ ||

ಹಲವು ದಿನಗಳ ನಂತರ . .
ಸತ್ಯಪ್ಪ ಬದುಕವನೆ ಹೈಕಳ ಎದೆಯೊಳಗೆ ಇಳಿದುಬಿಟ್ಟವನೆ
ಎದೆ ಸೆಟೆಸಿದಾ ಸತ್ಯ ಮುಷ್ಟಿ ಬಿಗಿದಾ ಸತ್ಯ |
ಕನಲಿ ಕೆರಳಿದ ಸತ್ಯ ಒಡಲ ಬೆಂಕಿಯ ಸತ್ಯ
ದೊರೆಯಂಜಿ ಮುಲುಗುಟ್ಟಿ ಸತ್ಯನ ಕಾಲಿಗೆ ಬಿದ್ದುಬಿಟ್ಟವನೆ ||
-ಕ.ವೆಂ. ನಾಗರಾಜ್
**************
26.8.2018ರ ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟಿತ:

ಶುಕ್ರವಾರ, ಮೇ 4, 2018

ಮೂಢ ಉವಾಚ - 410

ಹಿರಿಯರಾರೂ ಇಲ್ಲ ಕಿರಿಯರೂ ಇರದಿಹರು
ಅಣ್ಣ ತಮ್ಮದಿರವರು ಮುನ್ನಡೆಯುತಿಹರು |
ಭೂಮಾತೆ ಪೊರೆಯುತಿರೆ ದೇವಪಿತ ಕಾಯುತಿರೆ
ಸುದಿನವದು ಸನಿಹದಲಿ ಕಾಣು ಮೂಢ || 



ಮೂಢ ಉವಾಚ - 409

ಅವನೊಲುಮೆ ಬಲುಮೆಯನು ಕೊಂಡಾಡಬೇಕು
ಸಕಲರಿಗೆ ಸಮನಿಹನ ಗುಣವ ಧರಿಸಲುಬೇಕು ||
ಸದ್ವಿದ್ಯೆಯನು ಗಳಿಸಿ ಸತ್ಕರ್ಮದಲಿ ತೊಡಗೆ
ಅದುವೆ ಧರ್ಮದ ಹಾದಿ ತಿಳಿಯೊ ನೀ ಮೂಢ || 

ಬುಧವಾರ, ಮೇ 2, 2018

ಮೂಢ ಉವಾಚ - 408

ಜ್ಞಾನಜ್ಯೋತಿಯೆ ಅವನು ಸತ್ಯರೂಪನೆ ಅವನು
ಸರ್ವಮಿತ್ರನೆ ಅವನು ಸಕಲ ಶಕ್ತಿಯೆ ಅವನು |
ಅವನ ಮಹಿಮೆಯನರಿತು ನರನು ಬೆರಗಾಗಿರಲು
ನರನ ಪರಿ ಸುರವರನ ಮೆರೆದಿಪುದು ಮೂಢ || 

ಭಾನುವಾರ, ಏಪ್ರಿಲ್ 29, 2018

ಮೂಢ ಉವಾಚ - 407

ದೇವನೊಲುಮೆಗೆ ದಾರಿ ತೋರುವುದೆ ಸ್ತುತಿಯು
ಎದೆಯೊಳಗೆ ನಮ್ರತೆಯ ಬೀಜ ಬಿತ್ತುವುದು |
ಮನವು ನಿರ್ಮಲವಾಗಿ ಸುಖ ಶಾಂತಿ ಲಭಿಸುವುದು
ಸತ್ಯೋಪಾಸನೆಯ ಮಹಿಮೆಯಿದು ಮೂಢ || 

ಶನಿವಾರ, ಏಪ್ರಿಲ್ 28, 2018

ಮೂಢ ಉವಾಚ - 406

ಚಂಚಲಿತ ಮನಕಿರಲು ಬುದ್ಧಿಯ ಆಸರೆಯು
ಹೊರಸೆಳೆತಗಳ ತಳ್ಳಿ ಮನಸು ಸ್ಥಿರವಾಗುವುದು | 
ಸ್ಥಿರವಾದ ಮನಸಿನಲಿ ದೇವನನು ನೆನೆಯುತಿರೆ
ಶಾಂತಿಪಥದಲಿ ನೀನು ಮುನ್ನಡೆವೆ ಮೂಢ || 

ಮಂಗಳವಾರ, ಏಪ್ರಿಲ್ 24, 2018

ಮೂಢ ಉವಾಚ - 405

ಬೇಕೆಂಬುದೇ ಮನಸು ಬೇಡವೆಂಬುದದೆ ಮನಸು
ಅರಿತು ಮುನ್ನಡೆವುದಕೆ ಬುದ್ಧಿಯದು ಸಾಧನವು |
ಸಲ್ಲದಾಲೋಚನೆಗೆ ಬುದ್ಧಿಯನು ಬಳಸದಲೆ
ಹೊಯ್ದಾಟ ನಿಲಿಪುದಕೆ ಬಳಸು ಬಳಸೆಲೊ ಮೂಢ||

ಮಂಗಳವಾರ, ಏಪ್ರಿಲ್ 17, 2018

ಮೂಢ ಉವಾಚ - 404

ಲೋಕವನೆ ಧರಿಸಿಹನ ಜಪಿಸು ಜಪಿಸೆಲೆ ಜೀವ
ಮನವನವನಲಿ ನಿಲಿಸು ಬುದ್ದಿಯನು ನಿಲಿಸು |
ಅವನಿರದ ಇರುವಿಲ್ಲ ಅವನಿರದೆ ಜಗವಿಲ್ಲ
ಅವನ ಗರಿಮೆಯನರಿಯೆ ಉನ್ನತಿಯು ಮೂಢ || 



ಶನಿವಾರ, ಏಪ್ರಿಲ್ 14, 2018

ಮೂಢ ಉವಾಚ - 403

ಯಾವನೊಬ್ಬನೇ ಇಹನೊ ಅವನನೇ ಜಪಿಸು
ಅನ್ಯರನು ಸ್ತುತಿಸಿ ನಾಶವಾಗಲು ಬೇಡ |
ಸುಖದಾತನವನೆ ಪರಮಾತ್ಮನೊಬ್ಬನೆ
ಬಾರಿ ಬಾರಿಗೆ ಜಪಿಸಿ ದಾರಿ ಕಾಣೆಲೊ ಮೂಢ || 



ಶುಕ್ರವಾರ, ಏಪ್ರಿಲ್ 13, 2018

ಮೂಢ ಉವಾಚ - 402

ಪರಮವೇಗಿಯು ಅವನೆ ಪರಮ ಶಕ್ತಿಯು ಅವನೆ
ಸರ್ವಲೋಕದೊಳು ಅತಿಮಹಿಮನೊಬ್ಬನೆ |
ಸಕಲ ಚಾಲಕಗೆ ಸಮರೆಲ್ಲಿ ಎದುರೆಲ್ಲಿ
ಆಧರಿಪಗಾಧಾರವೆಲ್ಲಿಹುದೊ ಮೂಢ || 



ಗುರುವಾರ, ಏಪ್ರಿಲ್ 12, 2018

ಮೂಢ ಉವಾಚ - 401

ಧಾರಾಳಿಗಳಿವರು ಉರಿನುಡಿಗಳಾಡಲು
ನುಡಿಯೊಂದಕೆದುರಾಗಿ ಕಟುನುಡಿಗಳೈದಾರು |
ಸವಿನುಡಿಯ ಮೆಚ್ಚರು ಮೌನವಾಂತುವರು
ನಲ್ನುಡಿಗೆ ನಾಲಿಗೆಯು ಸವೆದೀತೆ ಮೂಢ || 

ಮಂಗಳವಾರ, ಏಪ್ರಿಲ್ 10, 2018

ಮೂಢ ಉವಾಚ - 400

     ಇದು 400ನೆಯ ಮೂಢ ಉವಾಚ! ಮೂಢ ಉವಾಚಗಳನ್ನು ಇದುವರೆಗೆ ಓದಿದವರಿಗೆ, ಮೆಚ್ಚಿದವರಿಗೆ, ಪ್ರತಿಕ್ರಿಯಿಸಿದವರಿಗೆ ಮೂಢನ ಕೃತಜ್ಞತೆಗಳು. ಇವೆಲ್ಲವೂ ಮೂಢನ ಸ್ವಗತಗಳು, ತನಗೆ ತಾನೇ ಹೇಳಿಕೊಂಡವುಗಳು. ಏಕೆಂದರೆ ಇನ್ನೊಬ್ಬರಿಗೆ ಹೇಳುವಷ್ಟು ಪ್ರೌಢನಿವನಲ್ಲ. ಎಲ್ಲವೂ ಸಮಾಜ ಅವನಿಗೆ ನೀಡಿದ ಅನುಭವಗಳು, ಜ್ಞಾನಿಗಳು ಹೇಳಿದ ಮಾತುಗಳು, ಜ್ಞಾನ ಭಂಡಾರದಿಂದ ಸಿಕ್ಕಿದವು, ತನ್ನ ಬುದ್ದಿಯ ಮಿತಿಗೆ ಒಳಪಟ್ಟು ತಿಳಿದದ್ದು ಎಂದು ಅಂದುಕೊಂಡದ್ದು. ಸ್ವಂತದ್ದು ಏನೂ ಇಲ್ಲ. ಅವನ್ನು ತನಗೆ ತಿಳಿದಂತೆ, ತಾನು ಅರ್ಥೈಸಿಕೊಂಡಂತೆ, ಇದು ಹೀಗೆ, ಅದು ಹಾಗೆ, ನೀನು ಹೀಗಿರು ಎಂದು ತನಗೆ ತಾನೇ ಗುನುಗಿಕೊಂಡದ್ದು! ಅಗುಳು ಕಂಡರೆ ಕಾಗೆ ತನ್ನ ಬಳಗವನ್ನು ಕಾ, ಕಾ ಎಂದು ಕೂಗಿ ಕರೆದಂತೆ, ತನಗೆ ಸಂತೋಷ ಕಂಡದ್ದನ್ನು, ತಾನು ತಿಳಿದಿದ್ದನ್ನು ಇತರರಲ್ಲಿ ಹಂಚಿಕೊಳ್ಳುವ ಮನೋಭಾವದಿಂದ ಬರೆದದ್ದು. ತನ್ನದೇ ಸರಿ, ತಾನು ಹೇಳಿದ್ದೇ ಸರಿ ಎಂಬ ಉದ್ಧಟತನ, ಪಂಡಿತನ ಹೆಮ್ಮೆ ಖಂಡಿತಾ ಇಲ್ಲ. ತಿಳಿಯಬೇಕಾದುದು ಬಹಳ, ತಿಳಿದುದು ಅತ್ಯಲ್ಪ ಎನ್ನುವ ಅರಿವು ಅವನಿಗೆ ಸದಾ ಜಾಗೃತವಿದೆ. ಈ 400ನೆಯ ಉವಾಚ ಒಂದು ರೀತಿಯಲ್ಲಿ ಅವನ ಸ್ವಪರಿಚಯವಾಗಿದೆ. 

ಒಳಿತನಾರೇ ಪೇಳಲ್ ಕಿವಿಯೊಡ್ಡಿ ಕೇಳುವನು

ಬೆರಗುಗಣ್ಣಿನಲಿ ಮೆಚ್ಚುಗೆಯ ಸೂಸುವನು |
ಪಂಡಿತನು ಇವನಲ್ಲ ಪಾಂಡಿತ್ಯ ಇವಗಿಲ್ಲ
ಮೂಢರಲಿ ಮೂಢನಿವ ಪರಮ ಮೂಢ |

ಸೋಮವಾರ, ಏಪ್ರಿಲ್ 9, 2018

ಮೂಢ ಉವಾಚ - 399

ನೀ ಮಾಡಿದುಪಕಾರ ಮರೆತುಬಿಡಬೇಕು
ಉಪಕಾರಕುಪಕಾರ ಬಯಸದಿರಬೇಕು |
ಉಪಕಾರ ಬಯಸುವರು ಕೆಳಗೆ ಬಿದ್ದವರಲ್ತೆ
ಕೆಳಗೆ ಬೀಳುವ ಕನಸ ಕಾಣದಿರು ಮೂಢ || 

ಭಾನುವಾರ, ಏಪ್ರಿಲ್ 8, 2018

ಮೂಢ ಉವಾಚ - 398

ಉನ್ನತಿಗೆ ಕಾರಕವು ಸಕಲರಿಗೆ ಹಿತಕರವು
ಸತ್ಕರ್ಮಯಜ್ಞವದು ಸುಸ್ನೇಹದಾಯಿನಿಯು |
ಸತ್ಕರ್ಮ ರಕ್ಷಿಪನ ಸತ್ಕರ್ಮ ಕಾಯುವುದು
ಕುಟಿಲತನವನು ಕುಟ್ಟಿ ಕೆಡವುವುದೊ ಮೂಢ || 



ಶನಿವಾರ, ಏಪ್ರಿಲ್ 7, 2018

ಮೂಢ ಉವಾಚ - 397

ಬ್ರಹ್ಮಚರ್ಯದಲಿರಲಿ ಗಾರ್ಹಸ್ಥ್ಯದಲ್ಲಿರಲಿ
ವನಪ್ರಸ್ಥಿಯೇ ಇರಲಿ ಋಣರಹಿತನಾಗಿರಲಿ |
ಸಂನ್ಯಾಸಿಯೇ ಇರಲಿ ಎಂತೇ ಇರುತಿರಲಿ
ಸಾಲವನು ತೀರಿಸದೆ ಸಾಯದಿರು ಮೂಢ || 



ಶುಕ್ರವಾರ, ಏಪ್ರಿಲ್ 6, 2018

ಮೂಢ ಉವಾಚ - 396

ಕರ್ಮವನು ಮಾಡುತಲೆ ಶತವರ್ಷ ನೀ ಬಾಳು
ಕರ್ಮವಿಲ್ಲದ ಧರ್ಮಕೆಲ್ಲಿಹುದು ಅರ್ಥ |
ಬಿಡಿಸಲಾರದ ನಂಟು ಅಂಟು ತಾನಲ್ಲ
ಕರ್ಮವನು ಮಾಡದಲೆ ವಿಧಿಯಿಲ್ಲ ಮೂಢ || 





ಗುರುವಾರ, ಏಪ್ರಿಲ್ 5, 2018

ಮೂಢ ಉವಾಚ - 395

ಇಹಜ್ಞಾನವಿರಬೇಕು ಪರಜ್ಞಾನವೂ ಬೇಕು
ಉಭಯ ತತ್ತ್ವಗಳ  ತಿಳಿದು ಸಾಗುತಿರಬೇಕು |
ಲೋಕಜ್ಞಾನದ ಬಲದಿ ಮರ್ತ್ಯಲೋಕವ ದಾಟೆ
ಅಮರತ್ವ ತಾನದೊಲಿಯದಿಹುದೇ ಮೂಢ || 





ಮಂಗಳವಾರ, ಏಪ್ರಿಲ್ 3, 2018

ಮೂಢ ಉವಾಚ - 394

ಅಮರ ತತ್ತ್ವದ ಅರಿವ ಶಿಖರವನು ಮುಟ್ಟಲು 
ಅಮರವಲ್ಲದ ಜಗದ ಜ್ಞಾನವದು ಮೆಟ್ಟಲು |
ಮರ್ತ್ಯಲೋಕವ ಮೀರಿ ಅಮರತ್ವ ಸಿಕ್ಕೀತು
ಪರಮ ಸತ್ಯದ ತಿಳಿವು ಪಡೆದವಗೆ ಮೂಢ || 



ಮೂಢ ಉವಾಚ - 393

ಮುದದಿ ಬೆಳಕಲಿ ನಿಂದು ಪ್ರಕೃತಿಯ ನೋಡು
ಪ್ರಕೃತಿಗೆ ಮಿಗಿಲೆನಿಪ ಜೀವಾತ್ಮನನು ಕಾಣು |
ನಿನ್ನೊಳಗೆ ನೀ ಸಾಗಿ ನಿನ್ನರಿವೆ ಗುರುವಾಗಿ
ಪರಮ ಸತ್ಯದಾನಂದ ಹೊಂದು ನೀ ಮೂಢ || 



ಶನಿವಾರ, ಮಾರ್ಚ್ 31, 2018

ಮೂಢ ಉವಾಚ - 392

ಪಿತನು ಪುತ್ರನಿಗೆ ಮಮತೆ ತೋರಿಸುವಂತೆ
ಜೀವದಾತನ ಒಲುಮೆ ಜೀವರಿಗೆ ಸಿಗದಿರದೆ |
ಅವನ ಕರುಣೆಯ ಬೆಳಕು ಬೆಳಗುತಿರಲೆಂದು
ದೇವದೇವನ ಮುದದಿ ಬೇಡಿಕೊಳೊ ಮೂಢ || 



ಶುಕ್ರವಾರ, ಮಾರ್ಚ್ 30, 2018

ಮೂಢ ಉವಾಚ - 391

ಕತ್ತಲೆಯ ಹೊರದೂಡಿ ಬೆಳಕೀವ ಸಜ್ಜನರ
ರೀತಿಗಳು ಕಾಯುವುವು ಪಾಪವನು ತಡೆಯುವುವು |
ಅವರೊಲುಮೆ ಬಲವಾಗಿ ಕರವಿಡಿದು ನಡೆಸುತಿರೆ
ಮುಸುಕಿರುವ ಪೊರೆ ಸರಿಯದಿರದೆ ಮೂಢ ||


ಗುರುವಾರ, ಮಾರ್ಚ್ 29, 2018

ಮೂಢ ಉವಾಚ - 390

ಮನದ ಕತ್ತಲೆ ಸರಿಸಿ ಅರಿವ ಬೆಳಕನು ಪಡೆಯೆ
ದುರ್ಗತಿಯು ದೂರಾಗಿ ನಿರ್ಭಯತೆ ನೆಲೆಸುವುದು |
ಬೆಳಕಿರುವ ಬಾಳಿನಲಿ ಜೀವನವೆ ಪಾವನವು
ಬೆಳಕಿನೊಡೆಯನ ನುಡಿಯನಾಲಿಸೆಲೊ ಮೂಢ || 



ಮಂಗಳವಾರ, ಮಾರ್ಚ್ 27, 2018

ಮೂಢ ಉವಾಚ - 389

ಸಂತಸವ ಚಿಮ್ಮಿಸುತ ಬಾಳು ಹಸನಾಗಿಸುತ
ಸಜ್ಜನರು ಸಾಗುವರು ಸಜ್ಜನಿಕೆ ಸಾರುವರು |
ಸಾಮರ್ಥ್ಯವನುಸರಿಸಿ ದಿವ್ಯತೆಯ ಹೊಂದುವರು
ಸಾಧಕರ ದಾರಿಯಲಿ ಸಾಗು ನೀ ಮೂಢ || 




ಶುಕ್ರವಾರ, ಮಾರ್ಚ್ 23, 2018

ಮೂಢ ಉವಾಚ - 388

ಚುರುಕಿನ ಕಾರ್ಯದಲಿ ವಿಶ್ವಾಸ ಮೇಳವಿಸಿ
ಸಂಕುಚಿತ ಭಾವನೆಯ ತುಂಡರಿಸಿ ಚೆಲ್ಲುತ್ತ |
ವಿಶ್ವವನೆ ಸಜ್ಜನರ ನೆಲೆಯೆನಿಸೆ ಹೋರುತಿಹ
ಜ್ಞಾನಧೀರರ ನಡೆಯನನುಸರಿಸು ಮೂಢ || 



ಗುರುವಾರ, ಮಾರ್ಚ್ 22, 2018

ಮೂಢ ಉವಾಚ - 387

ನಡೆನುಡಿಗಳೊಂದಾಗಿ ಚಿತ್ತ ನಿರ್ಮಲವಿದ್ದು
ಸಜ್ಜನಿಕೆಯೊಡಗೂಡಿ ಧರ್ಮಮಾರ್ಗದಿ ಸಾಗಿ |
ಕುಟಿಲತೆಯ ಹೊರದೂಡಿ ಮುಂದೆ ಸಾಗುವರವರು
ಮನುಕುಲಕೆ ಮಾನ್ಯರವರಲ್ತೆ ಮೂಢ || 



ಮಂಗಳವಾರ, ಮಾರ್ಚ್ 20, 2018

ಮೂಢ ಉವಾಚ - 386

ಸೋಲೆಂಬುದೆಲ್ಲಿಹುದು ಧರ್ಮದಲಿ ನಡೆವವಗೆ
ಮೂತತ್ತ್ವವೆದೆಯಲಿರೆ ವಿಶ್ವವನೆ ಕಾಣವನು |
ಎದ್ದವರು ಬಿದ್ದವರು ಎಲ್ಲರಿಗು ಬೆಳಕವನು
ಸಮದರ್ಶಿಯಾಗಿಹನ ಗೌರವಿಸು ಮೂಢ || 



ಸೋಮವಾರ, ಮಾರ್ಚ್ 19, 2018

ಮೂಢ ಉವಾಚ - 385

ಚಿಂತೆ ಕಂತೆಗಳ ಒತ್ತಟ್ಟಿಗಿಟ್ಟು
ಮಾವಿನೆಲೆ ತೋರಣವ ಬಾಗಿಲಿಗೆ ಕಟ್ಟು |
ಬೇವು-ಬೆಲ್ಲಗಳೆ ಜೀವನದ ಚೌಕಟ್ಟು
ಬಂದುದನೆ ಕಂಡುಂಡು ತಾಳುತಿರು ಮೂಢ ||



ಶುಕ್ರವಾರ, ಮಾರ್ಚ್ 16, 2018

ಮೂಢ ಉವಾಚ - 384

ದಿವ್ಯದೇಹದ ಒಡೆಯ ಬಯಸಿರಲು ಮುಕ್ತಿಯನು
ಯಾತ್ರೆಯದು ಸಾಗುವುದು ಧರ್ಮದಾ ಮಾರ್ಗದಲಿ |
ಹುಟ್ಟು ಸಾವಿನ ಚಕ್ರ ಉರುಳುವುದು ಅನವರತ
ಹಿತವಾದ ದಾರಿಯನು ಆರಿಸಿಕೊ ಮೂಢ || 



ಗುರುವಾರ, ಮಾರ್ಚ್ 8, 2018

ಮೂಢ ಉವಾಚ - 383

ಸತ್ಯಜ್ಞಾನದ ಅರಿವ ಸರ್ವಮೂಲದಿ ಪಡೆದು
ಅಂತರಂಗದೊಳಿರಿಸೆ ದೇವನವ ಕಾಣುವನು |
ಕಣ್ಣಿರುವ ಕುರುಡನು ಕಿವಿಯಿರುವ ಕಿವುಡನು
ಪಾಪಮಾರ್ಗದಿ ನಡೆದು ಬೀಳುವನು ಮೂಢ || 




ಶನಿವಾರ, ಮಾರ್ಚ್ 3, 2018

ಮೂಢ ಉವಾಚ - 382

ಮೇಲೇರು ಎಲೆ ಜೀವ ಕೆಳಗೆ ಜಾರದಿರು
ಜೀವಿಸುವ ದಾರಿಯನು ದೇವ ತೋರುವನು |
ಧರ್ಮದಲಿ ಬಾಳಿ ಇಳಿಯುವ ಹೊತ್ತಿನಲಿ
ಅನುಭವದ ಪಾಕವನು ವಿತರಿಸೆಲೊ ಮೂಢ ||