ಬುಧವಾರ, ಆಗಸ್ಟ್ 22, 2018

ಸತ್ಯಪ್ಪನ ಸತ್ಯ !


ಸತ್ಯಪ್ಪನೆಂಬೋನು ಎಲ್ಲದಾನೋ ಯಪಾ
ನಡುರಾತ್ರ್ಯಾಗ ಬಿಡದೆ ಹೊತ್ತೊಯ್ದರೋ |
ನನ್ನ ದಿಕ್ಕವನು ನನ್ನ ಉಸಿರವನು ಬಿಟ್ಟು ಬಿಡಿರೋ ಯಪಾ
ಸೆರಗೊಡ್ಡಿ ಬೇಡುವೆನು ಪುಣ್ಣೇವ ಕಟ್ಕೋರೀ ಯಪಾ ||

ನಮ್ಹಂತ್ಯಾಕ ಸತ್ಯಪ್ಪ ಇಲ್ಲಾ ಕಣಬೇ
ದೊರೆಯ ಕಾರ‍್ನಾಗವನ ಒಯ್ದಾರಬೇ |
ದೊರೆಯ ಕಣ್ಣೀಗಿ ಅವ ಕಿಸುರು ಕಣಬೇ
ದೊರೆಯ ಹಾದ್ಯಾಗವನು ಮುಳ್ಳಂತ್ಯಬೇ ||

ಅಂಗನಬೇಡ ನನರಾಜ ಕಾಪಾಡೋ ಯಪಾ
ನೀನೆ ನನ ದ್ಯಾವ್ರಂತ ದೀಪ ಹಚ್ತೀನಪಾ |
ಊರ ಬಿಟ್ಟೇವಂತೆ ತಿರುಪೆ ಬೇಡೇವಂತೆ
ಜೀವವೊಂದನಕುಳಿಸಿ ಬಿಟ್ಟು ಬಿಡಿರೋ ಯಪಾ ||

ಚಿಂತೆ ಬಿಡು ಮುದುಕಿ ಸತ್ಯಪ್ಪ ಬರ್ತಾನಬೇ
ಉಪ್ಪೆಸರು ಮಾಡಿಟ್ಟು ದಾರಿ ಕಾಯ್ವೋಗಬೇ |
ಆಳು ಮಕ್ಕಳು ನಾವು ನಮ್ಕೈಲಿ ಏನೈತಬೇ
ಕನಿಕರವ ದಣಿಗೆ ಅಡ ಇಟ್ಟೀವಬೇ ||

ಸತ್ಯಪ್ಪ ಬರದೆ ಓಗಾಣಿಲ್ಲ ನಾ ಓಗಾಣಿಲ್ಲಾ 
ಎಂಗಾರ ಮಾಡ್ಯವನ ಉಳಿಸೋ ಯಪಾ |
ಎಲ್ಲವನೊ ನನ ಕಂದ ಎಂಗವನೋ ನನ ಚಂದ
ನನ್ನೊಪ್ಪ ಮಾಡುದಕೆ ಅವನು ಬೇಕ್ರೋ ಯಪಾ ||

ಅಷ್ಟರಲ್ಲಿ . .
ಭರ್ರೆಂದು ಕಾರೊಂದು ಮೂಟೆಯೊಂದನು ಇಳಿಸಿ 
ಸರ್ರೆಂದು ತಿರುಗಿ ಒಂಟೋಯ್ತಲಾ |
ಚೀರುತ್ತ ಭೋರ‍್ಯಾಡಿ ಮುದುಕಿ ಅಳ್ತೈತಲ್ಲಾ
ಬಿಟ್ಟ ಕಣ್ ಬಿಟ್ಟಂತೆ ನೆಟ್ಟ ಕಣ್ ನೆಟ್ಟಂತೆ ಸತ್ಯಪ್ಪ ಕುಂತವ್ನಲ್ಲ ||

ಸತ್ಯಪ್ಪ ಸತ್ತಿಲ್ಲ ಸತ್ಯ ಮಾತ್ರ ಪೂರ್ತಿ ಸತ್ತೋಯ್ತಲಾ
ಉಳ ಬಿದ್ದು ಸಾಯಿರೋ ಅದ್ದು ತಿಂದೋಗಲೋ |
ಮಣ್ಣು ತೂರಿದ ಮುದುಕಿ ಶಾಪ ಹಾಕಿತಲ್ಲಾ
ಕರಿ ಮೋಡ ಮುಸುಕಿ ಬಾನೆಲ್ಲ ಕಪ್ಪಾಯ್ತಲಾ ||

ಹಲವು ದಿನಗಳ ನಂತರ . .
ಸತ್ಯಪ್ಪ ಬದುಕವನೆ ಹೈಕಳ ಎದೆಯೊಳಗೆ ಇಳಿದುಬಿಟ್ಟವನೆ
ಎದೆ ಸೆಟೆಸಿದಾ ಸತ್ಯ ಮುಷ್ಟಿ ಬಿಗಿದಾ ಸತ್ಯ |
ಕನಲಿ ಕೆರಳಿದ ಸತ್ಯ ಒಡಲ ಬೆಂಕಿಯ ಸತ್ಯ
ದೊರೆಯಂಜಿ ಮುಲುಗುಟ್ಟಿ ಸತ್ಯನ ಕಾಲಿಗೆ ಬಿದ್ದುಬಿಟ್ಟವನೆ ||
-ಕ.ವೆಂ. ನಾಗರಾಜ್
**************
26.8.2018ರ ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟಿತ: