ಕವಿಮನದಾಳದಿಂದ
ಬುಧವಾರ, ಅಕ್ಟೋಬರ್ 12, 2016
ಮೂಢ ಉವಾಚ - 216
ರಾಗರಹಿತ ಮನ ದೀಪದ ಕಂಬವಾಗಿ
ಸಂಸ್ಕಾರ ಬತ್ತಿಯನು ಭಕ್ತಿತೈಲದಿ ನೆನೆಸಿ |
ದೇವನ ನೆನೆವ ಮನ ಬತ್ತಿಯನು ಹಚ್ಚಲು
ಜ್ಞಾನಜ್ಯೋತಿ ಬೆಳಗದಿಹುದೆ ಮೂಢ ||
ಭಾನುವಾರ, ಅಕ್ಟೋಬರ್ 2, 2016
ಮೂಢ ಉವಾಚ - 215
ಸಂಕಟವ ಪರಿಹರಿಸೆ ವೆಂಕಟನ ಬೇಡುವರು
ಧನಕನಕ ಆಯಸ್ಸು ಸಂಪತ್ತು ಕೋರುವರು |
ಜ್ಞಾನಿಗಳರಿತಾರಾಧಿಪರು ನಿರ್ಮೋಹದಲಿ
ಅರಿವಿನ ದಾರಿಯರಸುವರು ಮೂಢ ||
ಶನಿವಾರ, ಸೆಪ್ಟೆಂಬರ್ 17, 2016
ಮೂಢ ಉವಾಚ - 214
ದಂಡವಿಡುವುದು ಕುಜನರನು ಅಂಕೆಯಲಿ
ನ್ಯಾಯನೀತಿಗಳು ಗೆಲಿಪುವುವು ವಾದದಲಿ |
ಗೌಪ್ಯತೆಯುಳಿಸಿ ಮಾನ ಕಾಯ್ವುದೆ ಮೌನ
ಬದುಕ ಗೆಲಿಪುವುದು ಜ್ಞಾನ ಮೂಢ ||
ಶನಿವಾರ, ಸೆಪ್ಟೆಂಬರ್ 10, 2016
ಮೂಢ ಉವಾಚ - 213
ದೇವ ಸುಜನ ಗುರು ಹಿರಿಯರಲಿ ಶ್ರದ್ಧೆ
ತನು ಶುದ್ಧಿ ಜೊತೆಜೊತೆಗೆ ಮನ ಶುದ್ಧಿ |
ನೇರ ನಡೆ ನುಡಿಯು ತ್ರಿಕರಣದಲಿರಲು
ಪರಮಪದಕಿದಕಿಂತ ತಪವುಂಟೆ ಮೂಢ ||
ಸೋಮವಾರ, ಸೆಪ್ಟೆಂಬರ್ 5, 2016
ಮೂಢ ಉವಾಚ - 212
ಧನಕನಕ ಅಧಿಕಾರ ಪದವಿ ಕೀರ್ತಿಗಳು
ಆತ್ಮಜ್ಞಾನದಲಿ ಸಿಗದೆಂದು ಕೊರಗದಿರು |
ಆನಂದ ಪ್ರಾಪ್ತಿ ಸುಖ ದುಃಖ ನಿವೃತ್ತಿ
ಆತ್ಮಜ್ಞಾನದಲೆ ಮುಕ್ತಿಯೋ ಮೂಢ ||
ಮಂಗಳವಾರ, ಆಗಸ್ಟ್ 16, 2016
ಮೂಢ ಉವಾಚ - 211
ಕಲಿವ ಶ್ರಮವಿರದೆ ಅರಿವು ಬಂದೀತೆ
ಇರುವಲ್ಲೆ ನಿಂತಿರಲು ದಾರಿ ಸವೆದೀತೆ|
ಆರಂಭವದು ವಿಷ ಅಂತ್ಯದಲಿ ಅಮೃತವು
ಪರಮಪದಕಾಗಿ ಪರಿತಪಿಸು ಮೂಢ||
ಮಂಗಳವಾರ, ಆಗಸ್ಟ್ 9, 2016
ಮೂಢ ಉವಾಚ - 210
ಪೂಜೆ ಮಾಡಿದೊಡೆ ಪಾಪ ಹೋಗುವುದೆ
ತನುಶುಚಿಯಾಗಿರಲು ಮನಶುಚಿಯಾಗುವುದೆ |
ಪಾಪ ಪುಣ್ಯಗಳ ಕೊಡುವವನು ಅವನಲ್ಲ
ನಿನ್ನ ನೀನರಿಯದಿರೆ ಫಲವಿಲ್ಲ ಮೂಢ ||
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)