ಕವಿಮನದಾಳದಿಂದ
ಗುರುವಾರ, ಮಾರ್ಚ್ 22, 2018
ಮೂಢ ಉವಾಚ - 387
ನಡೆನುಡಿಗಳೊಂದಾಗಿ ಚಿತ್ತ ನಿರ್ಮಲವಿದ್ದು
ಸಜ್ಜನಿಕೆಯೊಡಗೂಡಿ ಧರ್ಮಮಾರ್ಗದಿ ಸಾಗಿ |
ಕುಟಿಲತೆಯ ಹೊರದೂಡಿ ಮುಂದೆ ಸಾಗುವರವರು
ಮನುಕುಲಕೆ ಮಾನ್ಯರವರಲ್ತೆ ಮೂಢ ||
ಮಂಗಳವಾರ, ಮಾರ್ಚ್ 20, 2018
ಮೂಢ ಉವಾಚ - 386
ಸೋಲೆಂಬುದೆಲ್ಲಿಹುದು ಧರ್ಮದಲಿ ನಡೆವವಗೆ
ಮೂತತ್ತ್ವವೆದೆಯಲಿರೆ ವಿಶ್ವವನೆ ಕಾಣವನು |
ಎದ್ದವರು ಬಿದ್ದವರು ಎಲ್ಲರಿಗು ಬೆಳಕವನು
ಸಮದರ್ಶಿಯಾಗಿಹನ ಗೌರವಿಸು ಮೂಢ ||
ಸೋಮವಾರ, ಮಾರ್ಚ್ 19, 2018
ಮೂಢ ಉವಾಚ - 385
ಚಿಂತೆ ಕಂತೆಗಳ ಒತ್ತಟ್ಟಿಗಿಟ್ಟು
ಮಾವಿನೆಲೆ ತೋರಣವ ಬಾಗಿಲಿಗೆ ಕಟ್ಟು |
ಬೇವು-ಬೆಲ್ಲಗಳೆ ಜೀವನದ ಚೌಕಟ್ಟು
ಬಂದುದನೆ ಕಂಡುಂಡು ತಾಳುತಿರು ಮೂಢ ||
ಶುಕ್ರವಾರ, ಮಾರ್ಚ್ 16, 2018
ಮೂಢ ಉವಾಚ - 384
ದಿವ್ಯದೇಹದ ಒಡೆಯ ಬಯಸಿರಲು ಮುಕ್ತಿಯನು
ಯಾತ್ರೆಯದು ಸಾಗುವುದು ಧರ್ಮದಾ ಮಾರ್ಗದಲಿ |
ಹುಟ್ಟು ಸಾವಿನ ಚಕ್ರ ಉರುಳುವುದು ಅನವರತ
ಹಿತವಾದ ದಾರಿಯನು ಆರಿಸಿಕೊ ಮೂಢ ||
ಗುರುವಾರ, ಮಾರ್ಚ್ 8, 2018
ಮೂಢ ಉವಾಚ - 383
ಸತ್ಯಜ್ಞಾನದ ಅರಿವ ಸರ್ವಮೂಲದಿ ಪಡೆದು
ಅಂತರಂಗದೊಳಿರಿಸೆ ದೇವನವ ಕಾಣುವನು |
ಕಣ್ಣಿರುವ ಕುರುಡನು ಕಿವಿಯಿರುವ ಕಿವುಡನು
ಪಾಪಮಾರ್ಗದಿ ನಡೆದು ಬೀಳುವನು ಮೂಢ ||
ಶನಿವಾರ, ಮಾರ್ಚ್ 3, 2018
ಮೂಢ ಉವಾಚ - 382
ಮೇಲೇರು ಎಲೆ ಜೀವ ಕೆಳಗೆ ಜಾರದಿರು
ಜೀವಿಸುವ ದಾರಿಯನು ದೇವ ತೋರುವನು |
ಧರ್ಮದಲಿ ಬಾಳಿ ಇಳಿಯುವ ಹೊತ್ತಿನಲಿ
ಅನುಭವದ ಪಾಕವನು ವಿತರಿಸೆಲೊ ಮೂಢ ||
ಶುಕ್ರವಾರ, ಮಾರ್ಚ್ 2, 2018
ಮೂಢ ಉವಾಚ - 381
ನಿಲ್ಲದಿರಲೀ ನಡಿಗೆ ಬೀಳದಿರು ಕೆಳಗೆ
ಇಹದಲಿವೆ ಕಾರ್ಯಗಳು ಅಂಜದಿರು ಸಾವಿಗೆ |
ಹಗಲಿನಲಿ ಸೂರ್ಯನೊಲು ರಾತ್ರಿಯಲಿ ಅಗ್ನಿಯೊಲು
ಬೆಳಗುವಂತಹ ವರವ ಕೋರಿಕೊಳೊ ಮೂಢ ||
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)