ಶನಿವಾರ, ಏಪ್ರಿಲ್ 8, 2017

ಮೂಢ ಉವಾಚ - 223

ನೊಂದಮನಕೆ ಶಾಂತಿಯನು ನೀಡುವುದು
ಮನವ ನೋಯಿಸಿ ನರಳಿಸುವುದು ನಾಲಿಗೆ|
ಜೀವವುಳಿಸೀತು ಹಾಳುಗೆಡವೀತು 
ನಾಲಿಗೆಯದೆರಡಲಗಿನ ಕಠಾರಿ ಮೂಢ||


ಮೂಢ ಉವಾಚ - 222

ಎಲುಬಿರದ ನಾಲಿಗೆಯ ಮೆದುವೆಂದೆಣಿಸದಿರು
ಭದ್ರ ಹೃದಯವನು ಛಿದ್ರವಾಗಿಸಬಹುದು|
ಮನ ಮನೆಗಳ ಮುರಿದು ಕ್ಲೇಶ ತರಬಹುದು
ಕೆನ್ನಾಲಿಗೆಯ ತಣಿಪುದೆಂತೋ ಮೂಢ|| 


ಗುರುವಾರ, ಫೆಬ್ರವರಿ 9, 2017

ಮೂಢ ಉವಾಚ - 221

ಶ್ರವಣಕೆ ಶತಪಾಲು ಮಿಗಿಲು ಮನನ
ಮನನಕೆ ಶತಪಾಲು ಮಿಗಿಲನುಸರಣ |
ಅನುಸರಣಕಿಂ ಮಿಗಿಲಲ್ತೆ ನಿರ್ವಿಕಲ್ಪ
ನಿರ್ವಿಕಲ್ಪತೆಯಿಂ ಅರಿವು ಮೂಢ ||


ಮೂಢ ಉವಾಚ - 220

ವಿಷವಿರುವವರೆಗೆ ಆರೋಗ್ಯವೆಲ್ಲಿ
ವಿಷಯ ತುಂಬಿರುವಲ್ಲಿ ಮುಕ್ತಿಯೆಲ್ಲಿ |
ಅರಿವು ಬಹುದೆಲ್ಲಿ ಅಹಮಿಕೆಯಿರುವಲ್ಲಿ
ಸಿದ್ಧಿಯದೆಲ್ಲಿ ಅರಿವು ಇರದಲ್ಲಿ ಮೂಢ ||


ಶನಿವಾರ, ಫೆಬ್ರವರಿ 4, 2017

ಮೂಢ ಉವಾಚ - 219

ಶ್ರದ್ಧೆಯಿರಬೇಕು ಮಾಡುವ ಕಾರ್ಯದಲಿ
ಮೊದಲು ಕಾಯಕದ ಇರಬೇಕು ಅರಿವು | 
ಬಿಡದಿರಬೇಕು ಗುರಿಯ ಸಾಧಿಪ ಛಲವ 
ಯೋಗ ಭೋಗಸಿದ್ಧಿಗಿದುವೆ ದಾರಿ ಮೂಢ ||


ಶುಕ್ರವಾರ, ಫೆಬ್ರವರಿ 3, 2017

ಮೂಢ ಉವಾಚ - 218

ಸಾತ್ವಿಕತೆಯಿಂದ ಜ್ಞಾನ ಶಾಂತಿ ಆನಂದ
ರಾಜಸಿಕ ಪಡೆಯುವನು ಆಯಾಸ ನೋವ |
ಪರರ ನೋಯಿಪ ತಾಮಸವೆ ಅಜ್ಞಾನ
ಹಿತವದಾವುದೀ ಮೂರರಲಿ ಮೂಢ ||



ಶುಕ್ರವಾರ, ನವೆಂಬರ್ 11, 2016

ಮೂಢ ಉವಾಚ - 217

ಸತ್ವಗುಣ ಸಂಪನ್ನ ಸ್ವರ್ಗವನೆ ಸೇರುವನು
ಇದ್ದಲ್ಲೆ ಇರುವನು ರಾಜಸಿಕ ಗುಣದವನು |
ಪಶು ಪ್ರಾಣಿ ಕೀಟವಾಗುವನು ತಾಮಸಿಕ 
ಅಟ್ಟಡುಗೆಯುಣಬೇಕು ಇದು ಸತ್ಯ ಮೂಢ ||