ಸೋಮವಾರ, ಜನವರಿ 19, 2015

ಕುರುಡು ದ್ವೇಷ ಸಂಸಾರವ ನುಂಗಿತ್ತಾ . . .

     ಒಂದು ವೈದಿಕ ಭಜನೆಯ ಸಾಲುಗಳಿವು:
ಪೂಜನೀಯ ಪ್ರಭೋ ಹಮಾರೇ ಭಾವ ಉಜ್ವಲ ಕೀಜಿಯೇ |
ಛೋಡ ದೇವೇ ಛಲ ಕಪಟ ಕೋ ಮಾನಸಿಕ ಬಲ ದೀಜಿಯೇ ||
. . . .
ಸ್ವಾರ್ಥ ಭಾವ ಮಿಟೇ ಹಮಾರ ಪ್ರೇಮ ಪಥ ವಿಸ್ತಾರ ಹೋ |
. . . .
     'ಓ ದೇವರೇ, ನಮ್ಮ ಭಾವಗಳನ್ನು ಉಜ್ವಲಗೊಳಿಸು. ಛಲ, ಕಪಟಗಳನ್ನು ಬಿಡಿಸಿ ಮಾನಸಿಕ ಬಲ ನೀಡು, ನಮ್ಮ ಸ್ವಾರ್ಥ ಭಾವವನ್ನು ತೊಡೆದು ಪ್ರೇಮಪಥ ವಿಸ್ತಾರಗೊಳಿಸು' ಎಂದು ಪ್ರಾರ್ಥಿಸುವ ಸಾಲುಗಳು ಅರ್ಥಪೂರ್ಣವಾಗಿವೆ. ಬಹುತೇಕ ಕುಟುಂಬಗಳಲ್ಲಿ ಕಂಡುಬರುವ ಪರಸ್ಪರರಲ್ಲಿನ ಅಸಹನೆ, ಅಸಂತೋಷ, ಸಂದೇಹ, ಮತ್ಸರ, ದ್ವೇಷಗಳಿಗೆ ಮೂಲಕಾರಣ ಸ್ವಾರ್ಥಪ್ರೇರಿತ ಚಿಂತನಾಧಾಟಿ ಎಂಬುದರಲ್ಲಿ ಸಂದೇಹವಿರಲಾರದು. ಸಂಸಾರಗಳು ಪತನದ ಹಾದಿ ಹಿಡಿಯುವುದಕ್ಕೆ ಇದೇ ಕಾರಣವಾಗಿದೆ.
     ಸ್ವಾರ್ಥದಿಂದ ಮೂಡಿದ ದ್ವೇಷಭಾವನೆ ಹೇಗೆ ಸಂಸಾರವನ್ನೇ ನುಂಗುತ್ತದೆ ಎಂದು ಬಿಂಬಿಸುವ ಈ ರಚನೆಯನ್ನು ಸಂತ ಶಿಶುನಾಳ ಶರೀಫರ 'ಕೋಡಗನ ಕೋಳಿ ನುಂಗಿತ್ತಾ' ಹಾಡಿನ ಧಾಟಿಯಲ್ಲಿ ಹಾಡಬಹುದಾಗಿದೆ.

ಕುರುಡು ದ್ವೇಷ ಸಂಸಾರವ ನುಂಗಿತ್ತಾ . . .
ಕುರುಡು ದ್ವೇಷ ಸಂಸಾರವ ನುಂಗಿತ್ತಾ, ಕೇಳೆಲೊ ಮೂಢ
ಕುರುಡು ದ್ವೇಷ ಸು-ಸಾರವ ಹೀರಿತ್ತಾ                          || ಪ ||

ಸ್ವಾರ್ಥ ಪ್ರೀತಿಯ ನುಂಗಿ ಛಲವು ನೆಮ್ಮದಿಯ ನುಂಗಿ

ಕೇಳಲು ಬಂದ ವಿವೇಕವನ್ನೇ ಕೋಪವು ನುಂಗಿತ್ತಾ, ಮೂಢ || ೧ ||

ಸರಿಯು ತಪ್ಪಾಗಿ ಕಂಡು ತಪ್ಪು ಒಪ್ಪಾಗಿ ಬಂದು

ನ್ಯಾಯದ ಕಣ್ಣಿಗೆ ಮಣ್ಣೆರಚುತ್ತ ಮೀಸೆಯ ತಿರುವಿತ್ತಾ, ಮೂಢ    || ೨ ||

ಅನ್ಯರ ಮನೆಗೆ ಹಚ್ಚಿದ ಬೆಂಕಿ ಭಗ್ಗನೆ ಹೊತ್ತಿತ್ತಾ

ಹಚ್ಚಿದವರ ಮನೆಯನು ಕೂಡ ಬೆಂಕಿಯು ನುಂಗಿತ್ತಾ, ಮೂಢ || ೩ ||

ಕಟ್ಟಿಕೊಟ್ಟ ಬುತ್ತಿಯು ಮುಗಿದು ಹಸಿವದು ಹೆಚ್ಚಿತ್ತಾ

ಎರವಲು ಬುದ್ಧಿ ತಾಳಿಕೆ ಬರದೆ ಕಣ್ ಕಣ್ ಬಿಟ್ಟಿತ್ತಾ, ಮೂಢ  || ೪ ||

ಮುಸುಕಿದ ಮಾಯೆಯ ಪರದೆಯು ಸರಿದು ಅರಿವು ಮೂಡಿತ್ತಾ

ಆಗುವುದೇನಿದೆ ಮಾಡುವುದೇನಿದೆ ಕಾಲವು ಮಿಂಚಿತ್ತಾ, ಮೂಢ || ೫ ||

-ಕ.ವೆಂ.ನಾಗರಾಜ್.